ಗಾಂಧೀ ಜೋಡಿನ ಮಳಿಗೆ | Gandhi Jodina Malige

Publisher : Amulya Pustaka
ISBN : 978-81-982263-9-6
Publication Date : 2025
Edition : 1st
No of Pages : 128

ಲೇಖಕರು ತಮ್ಮ ಬಾಲ್ಯದಲ್ಲಿ ಅವ್ವ ರಾಗಿ ಬೀಸುವಾಗ ಹೇಳುತ್ತಿದ್ದ ಕಥೆಗಳು ಮತ್ತು ಹಳ್ಳಿಯ ಗೌರಜ್ಜಿ ಹೇಳುತ್ತಿದ್ದ ಜಾನಪದ ಕಥನಗಳಿಂದ ಪ್ರಭಾವಿತರಾದವರು. ಅವರ ಕಥೆಗಳಲ್ಲಿ ಕಂಡುಬರುವ ಆ ಮಣ್ಣಿನ ವಾಸನೆಗೆ ಈ ಹಳ್ಳಿಯ ಬೇರುಗಳೇ ಕಾರಣ. “ಬರಹ ನನ್ನನ್ನು ಸೆಳೆದುಕೊಂಡದ್ದು ಒಂದು ಸೋಜಿಗ” ಎನ್ನುವ ಲೇಖಕರು, ಪೊನ್ನಾಚಿಯ ಅರಣ್ಯದ ಅಂಚಿನ ಬದುಕನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಚಿತ್ರಿಸಿದ್ದಾರೆ.

Original price was: ₹175.00.Current price is: ₹165.00.

100 in stock

100 in stock

Description

‘ಗಾಂಧೀ ಜೋಡಿನ ಮಳಿಗೆ’
ಸಮಕಾಲೀನ ಕನ್ನಡ ಸಣ್ಣಕಥಾ ಲೋಕಕ್ಕೆ Prakash Puttappa ಅವರ ‘ಗಾಂಧೀ ಜೋಡಿನ ಮಳಿಗೆ’ ಸಂಕಲನವು ಒಂದು ಮೌಲ್ಯಯುತವಾದ ಸೇರ್ಪಡೆಯಾಗಿದೆ. ಕವಿಮನಸ್ಸಿನ ಪ್ರಕಾಶ್ ಪುಟ್ಟಪ್ಪ ಅವರು ಕತೆಗಾರರಾಗಿ ದಕ್ಕಿರುವುದು ಕನ್ನಡ ಸಾಹಿತ್ಯಕ್ಕೆ ಸಂದ ಲಾಭ. ಈ ಸಂಕಲನವು ಕೇವಲ ಕಲ್ಪನೆಗಳ ಮೊತ್ತವಲ್ಲ; ಬದಲಾಗಿ ನಮ್ಮ ಕಾಲದ ಬದುಕಿನ ವಾಸ್ತವಗಳನ್ನು ಹಿಡಿದಿಟ್ಟಿರುವ ಕನ್ನಡಿಯಾಗಿದೆ. ಇದು ಲೇಖಕರ ಬಾಲ್ಯದ ನೆನಪುಗಳ ಮತ್ತು ಹಳ್ಳಿಯ ಬದುಕಿನ ಒಂದು ಸುಂದರ ಅಭಿವ್ಯಕ್ತಿಯಾಗಿದೆ.
ಲೇಖಕರು ತಮ್ಮ ಬಾಲ್ಯದಲ್ಲಿ ಅವ್ವ ರಾಗಿ ಬೀಸುವಾಗ ಹೇಳುತ್ತಿದ್ದ ಕಥೆಗಳು ಮತ್ತು ಹಳ್ಳಿಯ ಗೌರಜ್ಜಿ ಹೇಳುತ್ತಿದ್ದ ಜಾನಪದ ಕಥನಗಳಿಂದ ಪ್ರಭಾವಿತರಾದವರು. ಅವರ ಕಥೆಗಳಲ್ಲಿ ಕಂಡುಬರುವ ಆ ಮಣ್ಣಿನ ವಾಸನೆಗೆ ಈ ಹಳ್ಳಿಯ ಬೇರುಗಳೇ ಕಾರಣ. “ಬರಹ ನನ್ನನ್ನು ಸೆಳೆದುಕೊಂಡದ್ದು ಒಂದು ಸೋಜಿಗ” ಎನ್ನುವ ಲೇಖಕರು, ಪೊನ್ನಾಚಿಯ ಅರಣ್ಯದ ಅಂಚಿನ ಬದುಕನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಚಿತ್ರಿಸಿದ್ದಾರೆ.
ಶೀರ್ಷಿಕೆಯ ಕಥೆಯಾದ ‘ಗಾಂಧೀ ಜೋಡಿನ ಮಳಿಗೆ’ ಕೇವಲ ಒಂದು ಕಥೆಯಲ್ಲ, ಅದೊಂದು ಸುಂದರ ರೂಪಕ. ಗಾಂಧೀಜಿಗಾಗಿ ಮೆಟ್ಟು ಹೊಲಿಯುವ ದಲಿತ ಮುನಿಯನ ಪಾತ್ರದ ಮೂಲಕ ಲೇಖಕರು ದೇಶಿ ಚಿಂತನೆಗಳನ್ನು ಎತ್ತಿ ಹಿಡಿಯುತ್ತಾರೆ. ಇಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದ ಜೊತೆಗೇ ಭಾರತದ ಒಳಗಿನ ಶ್ರೇಣೀಕೃತ ವ್ಯವಸ್ಥೆಯ ವಿರುದ್ಧದ ಅಂಬೇಡ್ಕರ್ ಅವರ ನಿಲುವಿನ ಸೂಕ್ಷ್ಮ ಎಳೆಗಳಿವೆ. ಚರ್ಮ ಸುಲಿದು ದಾರವ ಹೊಸೆದು ಮಹಾತ್ಮನಿಗೆ ಅರ್ಪಿಸಬಯಸುವ ಮುನಿಯನ ತುಡಿತ, ಜಾತ್ಯತೀತ ಮನಸ್ಸಿನ ಹಂಬಲಕ್ಕೆ ಸಾಕ್ಷಿಯಾಗಿದೆ.
ಈ ಸಂಕಲನದ ಅತ್ಯಂತ ಪ್ರಬಲ ಕಥೆ ಎಂದರೆ ‘ನಿಗಿನಿಗಿ ಕೆಂಡ’. ಇದು ಚೌಡಿಯ ಬದುಕಿನ ಮೂಲಕ ಆರ್ಥಿಕ ಸ್ವತಂತ್ರ ಪಡೆಯಬಯಸುವ ತಳವರ್ಗದವರ ಮೇಲೆ ಮೇಲ್ವರ್ಗದವರು ನಡೆಸುವ ದಮನವನ್ನು ಚಿತ್ರಿಸುತ್ತದೆ. ಊರಿನ ಗೌಡರ ಕುತಂತ್ರದ ಮುಂದೆ ಮುಗ್ಧ ಬದುಕುಗಳು ಹೇಗೆ ನಲುಗುತ್ತವೆ ಎಂಬುದು ಇಲ್ಲಿನ ಕಥಾವಸ್ತು. ತನ್ನ ಮಗ ಸಿದ್ರಾಮನನ್ನು ಕಾಡುಗಳ್ಳತನದ ಸುಳ್ಳು ಆಪಾದನೆಯ ಮೇಲೆ ಅರೆಸ್ಟ್ ಮಾಡಿಸಿದಾಗ, ಅಸಹಾಯಕಳಾದ ಚೌಡಿ ತೋರುವ ಪ್ರತಿರೋಧ ಕರುಳು ಹಿಂಡುವಂತಿದೆ.
ಸಮಾಜದ ಅನ್ಯಾಯಕ್ಕೆ ಬೇಸತ್ತ ಅವಳು, “ಕೊನ್ಗೂ ನಿನ್ನಾಟ್ವೇ ತಾನ್ ನಡ್ಯೋದು . ಒಪ್ಪುಸ್ಕೋ ನನ್ ಕಡೆ ಆರತಿಯ” ಎಂದು ತನ್ನ ಚೀಲದಲ್ಲಿದ್ದ ಧೂಪವನ್ನು ಕೆಂಡದ ಗುಳಿಗೆ ರಪ್ ಎಂದು ಬಡಿಯುತ್ತಾಳೆ. ಇದು ಕೇವಲ ಧೂಪ ಬಡಿಯುವ ಕ್ರಿಯೆಯಲ್ಲ; ಇದು ವ್ಯವಸ್ಥೆಯ ವಿರುದ್ಧದ ಕಿಡಿ, ಅವಳ ಎದೆಯೊಳಗೆ ಹೊತ್ತಿ ಉರಿಯುತ್ತಿರುವ ಅನ್ಯಾಯದ ಕೆಂಡದ ರೂಪಕ. ಹೆತ್ತ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ಆಕ್ರೋಶ ಮತ್ತು ಸಮಾಜದ ಕ್ರೌರ್ಯಕ್ಕೆ ಎದುರಾಗಿ ನಿಲ್ಲುವ ಅವಳ ಅಂತಿಮ ನಿರ್ಧಾರವು ಓದುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.
“ಕಂಡಾಯದೊಡೆಯ ಉಘೇ ಉಘೇ”: ಹಳೆಯ ತಲೆಮಾರಿನ ನಂಬಿಕೆಗಳು ಮತ್ತು ಹೊಸ ತಲೆಮಾರಿನ ಮಾದೇಶನ ಸುಧಾರಿತ ಆಲೋಚನೆಗಳ ನಡುವಿನ ಬಿರುಕನ್ನು ಇದು ಎತ್ತಿ ತೋರಿಸುತ್ತದೆ.
“ಹುಲಿಮಾರಿ”: ದೇಗುಲ ಪ್ರವೇಶ ಎಂಬುದು ಇಂದಿಗೂ ದಲಿತರಿಗೆ ಮರೀಚಿಕೆಯಾಗಿರುವ ಕಟು ಸತ್ಯವನ್ನು ಈ ಕಥೆ ಧ್ವನಿಸುತ್ತದೆ. ವ್ಯವಸ್ಥಿತ ಒಳಸಂಚಿನ ಮೂಲಕ ಗೋವಿಂದನ ಬಲಿ ತೆಗೆದುಕೊಳ್ಳುವ ಕ್ರೌರ್ಯವು ಬೆಚ್ಚಿಬೀಳಿಸುತ್ತದೆ.
“ಪರಿಧಿ”: ಪ್ರಗತಿಪರತೆಯ ಮುಖವಾಡ ಧರಿಸಿದವರ ಒಳಗೂ ಜಾತೀಯತೆಯ ಬೇರುಗಳು ಎಷ್ಟು ಆಳವಾಗಿರುತ್ತವೆ ಎಂಬುದನ್ನು ಈ ಕಥೆ ನಗ್ನವಾಗಿ ತೋರಿಸುತ್ತದೆ. ಅನ್ಯಜಾತಿಯ ಹೆಣ್ಣನ್ನು ವರಿಸಿದ ಮಗನನ್ನು ಬಹಿಷ್ಕರಿಸುವ ಮೂಲಕ ಸಮಾಜದ ‘ವ್ಯಾಸ’ ಮತ್ತು ‘ಪರಿಧಿ’ಯನ್ನು ಲೇಖಕರು ಅಳೆದಿದ್ದಾರೆ.
“ವಿಲೇಜ್ ಪೋಸ್ಟ್ ಆಫೀಸ್” ಮತ್ತು ‘ಐರನ್ ಆನೆಗಳು’ ಕಥೆಗಳು ಗಣಿಗಾರಿಕೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಮತ್ತು ಮಾನವೀಯ ಸಂಬಂಧಗಳು ಹೇಗೆ ನಾಶವಾಗುತ್ತಿವೆ ಎಂಬುದನ್ನು ದಾಖಲಿಸುತ್ತವೆ. “ಗೂಳಿ ಮದ್ದು” ಕಥೆಯು ಕಾಡಿನ ದಟ್ಟ ವಿವರಗಳೊಂದಿಗೆ ಮನುಷ್ಯನ ಲೈಂಗಿಕ ಹಪಾಹಪಿ ಮತ್ತು ನೈಸರ್ಗಿಕ ಔಷಧಗಳ ದಂಧೆಯ ರೋಚಕತೆಯನ್ನು ಕಟ್ಟಿಕೊಡುತ್ತದೆ.
“ಬಾರ್ಬಿ”, “ಕಾಗದದ ದೋಣಿ” ಮತ್ತು”ಮ್ಯಾಚ್ ದ ಫಾಲೋಯಿಂಗ್” ಕಥೆಗಳು ಮನುಷ್ಯನ ವಂಚಕ ಪ್ರವೃತ್ತಿ, ಅನೈತಿಕ ಸಂಬಂಧಗಳು ಮತ್ತು ಸಯಾಮಿ ಅವಳಿಗಳಂತಹ ವಿಭಿನ್ನ ಭಾವನೆಗಳನ್ನು ಒಳಗೊಂಡಿವೆ. “ಬಣ್ಣದ ಬುಗುರಿ” ಕಥೆಯ ಸಲೀನಾ ಮತ್ತು ಜೋಸೆಫ್ ಪಾತ್ರಗಳು ಪುಟ್ಟಣ್ಣ ಕಣಗಾಲ್ ಅವರ ಸಿನಿಮಾದ ಪಾತ್ರಗಳಂತೆ ನೆನಪಿನಲ್ಲಿ ಉಳಿಯುತ್ತವೆ.
ಪ್ರಕಾಶ್ ಪುಟ್ಟಪ್ಪ ಅವರ ಭಾಷಾಶೈಲಿಯಲ್ಲಿ ಚಾಮರಾಜನಗರ ಮತ್ತು ಮಲೈ ಮಹದೇಶ್ವರ ಬೆಟ್ಟದ ಸಾಲಿನ ಜನಪದೀಯ ಲಯವಿದೆ. ಯಾವುದೇ ಕಠಿಣ ರೂಪಕಗಳಿಲ್ಲದೆ ನೇರವಾಗಿ ಓದುಗರ ಹೃದಯ ತಟ್ಟುವ ಕಲೆ ಅವರಿಗೆ ಸಿದ್ಧಿಸಿದೆ. ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ವಿಜೇತ ಈ ಸಂಕಲನವು, ಕನ್ನಡ ಸಣ್ಣಕಥಾ ಪರಂಪರೆಯ ಸಮರ್ಥ ಮುಂದುವರಿಕೆಯಾಗಿದೆ. ಸಮಾಜದ ಮೌನ ನೋವುಗಳಿಗೆ ಧ್ವನಿಯಾಗುವ ಈ ಕೃತಿಯನ್ನು ಸಾಹಿತ್ಯಾಸಕ್ತರು ಖಂಡಿತವಾಗಿಯೂ ಗಮನಿಸಬೇಕು.
ಇಂತಹ ಅದ್ಭುತ ಕೃತಿಯನ್ನು ಸುಂದರವಾಗಿ ಪ್ರಕಟಿಸಿದ ಅಮೂಲ್ಯ ಪುಸ್ತಕ ಪ್ರಕಾಶನದ Krishna Chengadi ಅವರಿಗೆ ಅಭಿನಂದನೆಗಳು. ಸಮಕಾಲೀನ ಬದುಕಿನ ಸಂಕೀರ್ಣತೆಗಳನ್ನು ಮತ್ತು ಮಣ್ಣಿನ ಸಂವೇದನೆಯನ್ನು ಅರಿಯಬಯಸುವ ಆಸಕ್ತರಿಗೆ ಈ ಕೃತಿಯು ಹೊಸದೊಂದು ಒಳನೋಟವನ್ನು ನೀಡುತ್ತದೆ.
-ಶ್ರೀಧರ್‌ ಡಿ.ಸಿ.

Specification

Writer Information

Weight0.25 kg
AuthorsPrakash Puttappa

Customer Reviews

Reviews

There are no reviews yet.

Be the first to review “ಗಾಂಧೀ ಜೋಡಿನ ಮಳಿಗೆ | Gandhi Jodina Malige”

Your email address will not be published. Required fields are marked *